29.4 C
Karnataka
Monday, May 20, 2024

    ರಾಷ್ಟ್ರೀಯ ಶಿಕ್ಷಣ ನೀತಿ – 2020 ರಲ್ಲಿ ಇರುವುದಾದರು ಏನು

    Must read



    ಮೂಲಭೂತವಾಗಿ ಮಾನವನ ಸಾಮರ್ಥ್ಯವನ್ನು ಹೆಚ್ಚಿಸಲು, ಸಮಾಜ ಮತ್ತು ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣ ಬಹಳ ಮುಖ್ಯ. ಆರ್ಥಿಕ ಬೆಳವಣಿಗೆಗೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆ, ವೈಜ್ಞಾನಿಕ ಪ್ರಗತಿಗೆ ಶಿಕ್ಷಣ ಬಹಳ ಮುಖ್ಯ. ನಮ್ಮ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶ. ಮುಂಬರುವ ದಶಕಗಳಲ್ಲಿ , ಮುಂದಿನ ಯುವ ಪೀಳಿಗೆಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ನಿಜವಾಗಲೂ ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಈ ದಿಶೆಯಲ್ಲಿ ಭಾರತ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.

    ಭಾರತ ಸರ್ಕಾರದ ಸಚಿವ ಸಂಪುಟವು 29ನೇ ಜುಲೈ 2020 ರಂದು ನಡೆದ ಸಭೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ( NEP 2020) ನ್ನು ಅಂಗೀಕರಿಸಿತು. 1986ರ ಶಿಕ್ಷಣ ನೀತಿಯನ್ನು ಪಲ್ಲಟಗೊಳಿಸಿದ ಈ ಹೊಸ ಶಿಕ್ಷಣ ನೀತಿಯು 21ನೇ ಶತಮಾನದ ಮೊಟ್ಟ ಮೊದಲ ಶಿಕ್ಷಣ ನೀತಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.ಇಸ್ರೊದ ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿಯು ನೀಡಿರುವ ಶಿಪಾರಸ್ಸುಗಳ ಮೇರೆಗೆ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು ಎರಡು ಲಕ್ಷ ಸಲಹೆಗಳನ್ನು ಪರಿಶೀಲಿಸಿ, ನೀತಿಯನ್ನು ರಚಿಸಿರುವುದು ಇದರ ವೈಶಿಷ್ಟ್ಯ.

    ಚಾರಿತ್ರಿಕವಾಗಿ ಮೊಟ್ಟ ಮೊದಲ ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯು 1968 ರಲ್ಲಿ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಇಚ್ಛೆಯ ಮೇರೆಗೆ ಜಾರಿಗೆ ಬಂದಿತು. 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಿತಿ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಪ್ರೊ. ಡಿ ಎಸ್ ಕೊಠಾರಿಯವರು ಕಾರ್ಯನಿರ್ವಹಿಸಿದ್ದರು. ನಂತರ 1986ರಲ್ಲಿ ಎರಡನೆಯ ರಾಷ್ಟ್ರೀಯ ಶಿಕ್ಷಣ ನೀತಿಯು ರಾಜೀವ್‍ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಅವರ ಒಪ್ಪಿಗೆ ಮತ್ತು ಆದೇಶದ ಮೇರೆಗೆ ಜಾರಿಗೆ ಬಂದಿತು. ಪುನಃ 1986 ರ ಶಿಕ್ಷಣ ನೀತಿಯನ್ನು 1992 ರಲ್ಲಿ ಪರಿಷ್ಕರಿಸಲಾಯಿತು.ಸುಮಾರು 34 ವರ್ಷಗಳ ಬಳಿಕ ಈಗ 2020 ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬಂದಿದೆ.

    ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.

    ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸುವುದು ನೀತಿಯ ಮೂಲ ಉದ್ದೇಶವಾಗಿರುತ್ತದೆ. ನೀತಿಯ ಆಧಾರ ಸ್ತಂಭಗಳು ಇಕ್ವಿಟಿ, ಗುಣಮಟ್ಟ, ಕೈಗೆಟಕುವಿಕೆ ಮತ್ತು ಹೊಣೆಗಾರಿಕೆ.

    ನೀತಿಯ ಅವಲೋಕನ – ಪ್ರಮುಖಾಂಶಗಳು

    ಶಾಲಾ ಶಿಕ್ಷಣ

    ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಇನ್ನು ಮುಂದೆ 10+2 ಶಿಕ್ಷಣದ ವ್ಯವಸ್ಥೆ ಇರುವುದಿಲ್ಲ. ಬದಲಾಗಿ ಇದನ್ನು 5+3+3+4 ರಂತೆ ವಿಂಗಡಣೆ ಮಾಡಲಾಗಿದೆ. ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಗ್ರಹಣ ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಈ ವಿನ್ಯಾಸದ ಆಧಾರದ ಮೇಲೆ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಲಾಗಿದೆ.

    ಅ) ಬುನಾದಿ ಹಂತ ( Foundation stage ) ( 3 – 8 ವರ್ಷಗಳು ) ಇನ್ನು ಮುಂದೆ ಮಕ್ಕಳ ಶಿಕ್ಷಣದ ಹಕ್ಕು ಮೂರನೇ ವಯಸ್ಸಿನಿಂದಲೇ ಪ್ರಾರಂಭವಾಗುತ್ತದೆ. ಶಾಲೆಯ ಮೊದಲ ಐದು ವರ್ಷಗಳು ಬುನಾದಿಯ ಹಂತ. ಮೂರು ವರ್ಷದ ಅಂಗನವಾಡಿ ಅಥವಾ ಪೂರ್ವ ಶಾಲಾ ಹಂತ ( 3 – 6 ವ ) ಮತ್ತು 1 ನೇ ಹಾಗೂ 2 ನೇ ತರಗತಿಗಳು ಈ ಹಂತದಲ್ಲಿ ಸೇರಿವೆ. ಈ ಹಂತದಲ್ಲಿ ಜಾರಿ ಮಾಡಿರುವ ಪ್ರಮುಖ ಬದಲಾವಣೆಯೆಂದರೆ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ( Early childwood care and Education – ECCE ) ಅಡಿಯಲ್ಲಿ ಇದುವರೆವಿಗೂ ಗಣನೆಗೆ ತೆಗದುಕೊಳ್ಳದ ಮೂರು ವರ್ಷದ ಮಕ್ಕಳ ಶಿಕ್ಷಣವನ್ನು ಮುಖ್ಯವಾಹಿನಿಗೆ ಸರಿಸಿರುವುದು. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಅನ್ವೇಷಣೆ ಆಧಾರಿತ ಕಲಿಕೆ, ವರ್ಣಮಾಲೆಗಳು, ಭಾಷೆಗಳು, ಸಂಖ್ಯೆಗಳು, ಎಣಿಕೆ, ಬಣ್ಣಗಳು, ಆಕಾರಗಳು, ಚಿತ್ರಕಲೆ, ಇತ್ಯಾದಿ, ಸೂಕ್ಷ್ಮತೆ, ಉತ್ತಮ ನಡವಳಿಕೆ ಮತ್ತು ಸೌಜನ್ಯ ಇವುಗಳಿಗೆ ಒತ್ತು ನೀಡಲಾಗುತ್ತದೆ.

    ಆ) ಪೂರ್ವ ಸಿದ್ಧತಾ ಹಂತ ( Preparatory stage ) ( 8 – 11 ವರ್ಷಗಳು ) ಈ ಹಂತದಲ್ಲಿ 3 ರಿಂದ 5 ನೇ ತರಗತಿಯವರೆಗಿನ ಶಿಕ್ಷಣವು ಒಳಗೊಂಡಿದೆ. ಈ ಹಂತದಲ್ಲಿ ಆಟ ಚಟುವಟಿಕೆಗಳ ಮೂಲಕ ಶಿಕ್ಷಣ, ಹೊಸತನ್ನು ಕಂಡುಹಿಡಿಯುವ ಮೂಲಕ ಬೆಳವಣಿಗೆ ಹಾಗೂ ಸೃಜನಾಶೀಲಾತ್ಮಕ ಕಲಿಕೆಯನ್ನು ಪ್ರಾರಂಭಿಸಲು ಒತ್ತು ನೀಡಲಾಗುವುದು.

    ಇ) ಮಧ್ಯಮ ಹಂತ ( Middle school stage ) ( 11- 14 ವರ್ಷಗಳು )
    ಈ ಹಂತದಲ್ಲಿ 6 ರಿಂದ 8 ನೇ ತರಗತಿಯ ವರೆಗಿನ ಶಿಕ್ಷಣವನ್ನು ನೀಡಲಾಗುವುದು. ವಿಷಯಗಳ ಪರಿಕಲ್ಪನೆ ಮತ್ತು ಭೋದನೆಗೆ ಒತ್ತು ನೀಡಲಾಗುವುದು. ಈ ಹಂತದಲ್ಲಿ 6 ನೇ ತರಗತಿಯಿಂದ ವೃತ್ತಿ ಪರ ಶಿಕ್ಷಣವನ್ನು ಮುಖ್ಯವಾಹಿನಿ ಶಿಕ್ಷಣದ ಜೊತೆಗೆ ಸಂಯೋಜಿಸಿರುವುದು ನೀತಿಯ ವೈಶಿಷ್ಟ್ಯತೆ.

    ಈ) ಪ್ರೌಢ ಹಂತ ( Secondary stage ) ( 14 – 18 ವರ್ಷಗಳು )
    ಈ ಹಂತದಲ್ಲಿ 9 ನೇ ತರಗತಿಯಿಂದ 12 ನೇ ತರಗತಿಯ ವರೆಗಿನ ವಿದ್ಯಾಭ್ಯಾಸವನ್ನು ನೀಡಲಾಗುವುದು. ಈ ಹಂತದಲ್ಲಿ ವಿಮರ್ಶಾತ್ಮಕ ಚಿಂತನೆ, ವಿಷಯಗಳ ಆಳವಾದ ಅಧ್ಯಯನ, ಜೀವನದ ಆಸೆ ಆಕಾಂಕ್ಷೆಗಳಿಗೆ ಗಮನ. ಜೀವನೋಪಾಯ ಮತ್ತು ಉನ್ನತ ಶಿಕ್ಷಣದ ತಯಾರಿ, ಈ ಅಂಶಗಳಿಗೆ ಒತ್ತು ನೀಡಲಾಗುವುದು. ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗುವುದು.

    ಶಿಕ್ಷಣವನ್ನು ಸಾರ್ವತ್ರಿಕರಣಗೊಳಿಸಿ, 2030 ರ ವೇಳೆಗೆ ಪೂರ್ವ ಶಾಲೆಯಿಂದ ಪ್ರೌಢಶಾಲೆಯ ಹಂತದವರೆಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳ ನೊಂದಣಿಯನ್ನು ಸಾಧಿಸುವುದು ( 100% ಜಿಇಆರ್ ). ಇದರಿಂದ ಶಾಲೆಯಿಂದ ಹೊರಗೆ ಉಳಿದಿರುವ ಎರಡು ಕೋಟಿ ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಉದ್ದೇಶ.

    ಕನಿಷ್ಠ 5 ನೇ ತರಗತಿಯವರೆಗೆ ಮಾತೃ ಭಾಷೆ / ಸ್ಥಳೀಯ ಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು.

    ತ್ರಿ ಭಾಷಾ ಸೂತ್ರವನ್ನು ಮುಂದುವರಿಸಲಾಗಿದೆ.

    ಭಾರತೀಯ ಶಾಸ್ತ್ರೀಯ ಭಾಷೆಗಳನ್ನು ಮತ್ತು ಸಾಹಿತ್ಯವನ್ನು ಐಚ್ಛಿಕವಾಗಿ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ.

    ಶಾಲಾ ಪೂರ್ವ ಕಲಿಕೆಯಿಂದ ಪ್ರೌಢ ಶಿಕ್ಷಣದವರೆಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣಕ್ಕೆ ಖಾತರಿಯನ್ನು ನೀಡಲಾಗಿದೆ. ಪಠ್ಯ ಕ್ರಮದಲ್ಲಿ ನೈತಿಕ, ಮಾನವೀಯ ಮತ್ತು ಸಂವಿಧಾನಿಕ ಮೌಲ್ಯಗಳು, ಭಾರತೀಯ ಎಥೋಸ್, ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.

    ಜೀವನದ ಮೌಲ್ಯಗಳ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ.

    ಎಲ್ಲಾ ಹಂತಗಳ ಕಲಿಕೆಯ ವಿಧಾನದಲ್ಲಿ ಸೃಜನಾತ್ಮಕ, ವಿಮರ್ಶಾತ್ಮಕ ಚಿಂತನೆ ಹಾಗೂ ಕಲ್ಪನಾ ಶಕ್ತಿಯ ವೃದ್ಧಿ ಮತ್ತು ಅದರಂತೆ ಗ್ರಹಿಸುವ ಶಕ್ತಿಯ ಬೆಳವಣಿಗೆಗೆ ಒತ್ತು ನೀಡಲಾಗಿದೆ.

    ಬಹಳ ಮುಖ್ಯವಾಗಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಏಕರೂಪ ನಿಯಮಗಳು ಅನ್ವಯವಾಗಲಿವೆ.

    ರಾಷ್ಟ್ರೀಯ ಮಟ್ಟದಲ್ಲಿ ಏಕರೂಪದ ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರದ ಪ್ರೇಮ್ ವರ್ಕ್‍ನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ.

    ಸಾರಾಂಶ ಮೌಲ್ಯ ಮಾಪನದ ಬದಲು ( summative Assesment ) ನಿರಂತರ ರಚನಾತ್ಮಕ ಮೌಲ್ಯ ಮಾಪನದ ( Formative assessment ) ವನ್ನು ಎಲ್ಲಾ ಹಂತಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ.

    ಪ್ರತಿ ವರ್ಷ ಪರೀಕ್ಷೆಗಳು ಇರುವುದಿಲ್ಲ. ಬದಲಿಗೆ ಮೂರು, ಐದು ಮತ್ತು ಎಂಟನೇ ತರಗತಿಯಲ್ಲಿ ಮಾತ್ರ ಪರೀಕ್ಷೆ ಇರುತ್ತದೆ. ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ಪರೀಕ್ಷಾ ಮಂಡಳಿಗಳಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಬಹಳ ಮುಖ್ಯವಾಗಿ ಹೇಳುವುದಾದರೆ, ಬಹು ಶಿಸ್ತೀಯ ( multidisciplinary ) ಮತ್ತು ಬಹು ಭಾಷೆಯನ್ನುಕಲಿಯುವಂತೆ ಮಕ್ಕಳನ್ನು ತಯಾರು ಮಾಡ ಬೇಕೆಂಬುವುದು ಈ ನೀತಿಯ ಗುರಿ.
    ಇನ್ನು ಮುಂದೆ ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ಕೌಶಲ ಮತ್ತು ಶೈಕ್ಷಣಿಕ ವಿಷಯಗಳ ನಡುವೆ ಕಠಿಣವಾದ ವ್ಯತ್ಯಾಸ ಮತ್ತು ಅಡ್ಡ ಗೋಡೆಗಳು ಇರುವುದಿಲ್ಲ.

    5 ರಿಂದ 10 ಕಿಲೋ ಮೀಟರ್ ತ್ರಿಜ್ಯವುಳ್ಳ ಪ್ರದೇಶದಲ್ಲಿ ಒಂದರಂತೆ, ಶಾಲಾ ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು. ಈ ಸಂಕೀರ್ಣದಲ್ಲಿ ಪೂರ್ವ ಶಾಲಾ ತರಗತಿಯಿಂದ ಪ್ರೌಢಶಾಲಾ ಮಟ್ಟದವರೆವಿಗೆ ತರಗತಿಗಳಿದ್ದು, ಉತ್ತಮ ಮಟ್ಟದ ಮೂಲ ಭೂತ ಸೌಕರ್ಯಗಳನ್ನು ಹೊಂದಿರುತ್ತವೆ.

    ಉನ್ನತ ಶಿಕ್ಷಣ

    ಉನ್ನತ ಶಿಕ್ಷಣದಲ್ಲಿ 2035 ರ ವೇಳೆಗೆ ಶೇ 50 ರಷ್ಟು ಸರಾಸರಿ ದಾಖಲಾತಿ ಅನುಪಾತವನ್ನು ( ಜಿಇಆರ್ ) ಮುಟ್ಟುವ ಗುರಿಯನ್ನು ಹೊಂದಲಾಗಿದೆ.

    2035 ರ ವೇಳೆಗೆ ವಿಶ್ವ ವಿದ್ಯಾಲಯಗಳಿಂದ ಕಾಲೇಜುಗಳು ಸಂಯೋಜನೆ ಪಡೆಯುವ ಪದ್ಧತಿ ಇರುವುದಿಲ್ಲ ( No affiliation system ). ಆ ವೇಳೆಗೆ ಪ್ರತಿಯೊಂದು ಮಹಾ ವಿದ್ಯಾಲಯವು ಬಹು ಶಿಸ್ತೀಯ ( multidisciplinary ) ಮತ್ತು ದೊಡ್ಡ ಮಟ್ಟದ ಕಾಲೇಜಾಗಿ ಹಂತ ಹಂತವಾಗಿ ಬೆಳೆದು, ಕನಿಷ್ಟ ಮೂರು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ ಬೇಕಾಗುತ್ತದೆ. ಈ ಮಹಾವಿದ್ಯಾಲಯಗಳು ಉತ್ತಮ ಗುಣ ಮಟ್ಟವನ್ನು ಹೊಂದಿದ್ದು, ಪದವಿಗಳನ್ನು ನೀಡುವ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯ ಬೇಕಾಗುತ್ತದೆ.

    2035 ರ ವೇಳೆಗೆ ದೇಶದ ಪ್ರತಿಯೊಂದು ಜಿಲ್ಲೆಯಲ್ಲು ದೊಡ್ಡಮಟ್ಟದ ( 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ) ಬಹು ವಿಷಯಗಳ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

    2035 ರ ವೇಳೆಗೆ ಒಂದೇ ವಿಷಯದಲ್ಲಿ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ ( single faculty colleges and universities ). ಈಗಿರುವ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಮಹಾ ವಿದ್ಯಾಲಯಗಳು ಬಹು ಶಿಸ್ತೀಯ ಶಿಕ್ಷಣ ಸಂಸ್ಥೆಗಳಾಗಿ ಬದಲಾಗಲು ಅವಶ್ಯಕತಾ ಕ್ರಮಗಳನ್ನು ತೆಗದುಕೊಳ್ಳಲು ಸೂಚಿಸಲಾಗಿದೆ.
    ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳನ್ನು ಎರಡು ರೀತಿಯಲ್ಲಿ ವಿಂಗಡಿಸಲು ತೀರ್ಮಾನಿಸಲಾಗಿದೆ.

    ಅ) ಜಾಗತಿಕ ಮಟ್ಟದ ಸಂಶೋಧನೆಗೆ ಒತ್ತು ನೀಡುವ ಹಾಗೂ ಉತ್ತಮ ಮಟ್ಟದ ಭೋದನೆಯನ್ನು ಮಾಡುವ ವಿಶ್ವ ವಿದ್ಯಾಲಯಗಳು ( Research Intensive univerities )

    ಆ) ಭೋದನಗೆ ಒತ್ತು ಕೊಟ್ಟು, ಗಮನಾರ್ಹ ಸಂಶೋಧನೆಯನ್ನು ನಡೆಸುವ ವಿಶ್ವ ವಿದ್ಯಾಲಯಗಳು ( Teaching Intensive universities ). ಜೊತೆಗೆ, ಪದವಿಗಳನ್ನು ನೀಡುವ ಬಹು ಶಿಸ್ತೀಯ ಸ್ವಾಯತ್ತ ಮಹಾವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತವೆ.
    ಇನ್ನು ಮುಂದೆ ಎಂ. ಫಿಲ್ ಕೋರ್ಸ್ ಇರುವುದಿಲ್ಲ. ಈ ಕೋರ್ಸ್‍ಗೆ ತಿಲಾಂಜಲಿ ನೀಡಲಾಗಿದೆ.

    ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಸಂಶೋಧನೆಗೆ ಪ್ರಾಧಾನ್ಯತೆ ನೀಡುವ ಸಲುವಾಗಿ ರಾಷ್ಟ್ರೀಯ ಸಂಶೋಧನಾ ಪೌಂಢೇಶನ್ ಸ್ಥಾಪಿಸಲು ಉದ್ದೇಶಿಸಲಾಗಿದೆ.

    ಪದವಿ ಶಿಕ್ಷಣದಲ್ಲಿ ನಾಲ್ಕು ವರ್ಷಗಳ ಅವಧಿಯನ್ನು ಹೊಂದಿರುವ ಪದವಿಯ ಶಿಕ್ಷಣವನ್ನು ಕಾರ್ಯ ರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ವಿವಿಧ ಬಗೆಯ ನಿರ್ಗಮನ ಆಯ್ಕೆಯ ಅವಕಾಶಗಳನ್ನು ನೀಡಲಾಗಿದೆ. ಅಂದರೆ 2 ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಡಿಪ್ಲೊಮೊ ಪ್ರಮಾಣ ಪತ್ರ, ಒಂದು ವರ್ಷದ ಅಧ್ಯಯನ ಮುಗಿದ ನಂತರ ನಿರ್ಗಮಿಸಿದರೆ ಸರ್ಟಿಫಿಕೇಟ್ ಕೋರ್ಸ್ ಪ್ರಮಾಣ ಪತ್ರವನ್ನು ನೀಡಲಾಗುವುದು. ನಾಲ್ಕು ವರ್ಷದ ವ್ಯಾಸಂಗ ಮುಗಿದ ನಂತರ ಒಂದು ವರ್ಷದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯ ಬಹುದು.

    ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ( NTA ) ಏಕ ರೀತಿಯ ಸಾಮಾನ್ಯ ಪರೀಕ್ಷೆಯನ್ನು ನಡೆಸಲಿದೆ.
    ಆನ್‍ಲೈನ್ ಶಿಕ್ಷಣ, ದೂರ ಶಿಕ್ಷಣಗಳಿಗೆ ಉತ್ತೇಜನ ನೀಡಲಾಗಿದೆ.ಒಟ್ಟು ಆಂತರಿಕ ಉತ್ಪನ್ನದ ( ಜಿಡಿಪಿ ) ಶೇ 6 ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಲು ಸೂಚಿಸಲಾಗಿದೆ.

    ತಾಂತ್ರಿಕ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
    ಜಾಗತಿಕ ಮಟ್ಟದಲ್ಲಿ ಮೊದಲ ನೂರು Rank ಪಟ್ಟಿಯಲ್ಲಿ ಸ್ಥಾನಗಳಿಸಿರುವ ವಿದೇಶಿ ವಿಶ್ವ ವಿದ್ಯಾಲಯಗಳಿಗೆ ನಮ್ಮ ದೇಶದಲ್ಲಿ ಕ್ಯಾಂಪಸ್ ಸ್ಥಾಪಿಸಲು ಅನುಮತಿ ನೀಡಲಾಗುವುದು.
    ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಲೆ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಬೋಧನೆಗೆ ಒತ್ತು ನೀಡಲಾಗುವುದು.
    ದೇಶದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು “ಭಾರತೀಯ ಉನ್ನತ ಶಿಕ್ಷಣ ಮಂಡಳಿ” ಸ್ಥಾಪನೆಯಾಗಲಿದೆ.

    ಶಿಕ್ಷಕರ ಶಿಕ್ಷಣ

    ಬೋಧನಾ ಕ್ರಮ ಮತ್ತು ಅಭ್ಯಾಸದಲ್ಲಿ ಉನ್ನತ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಇನ್ನು ಮುಂದೆ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ( Integrated B.Ed course ) ಕಾರ್ಯ ಕ್ರಮವನ್ನು ಬಹು ಶಿಸ್ತಿನ ( Multi disciplinary ) ವಿದ್ಯಾ ಸಂಸ್ಥೆಗಳಲ್ಲಿ ನೀಡಲಾಗುವುದು. ಇದರಲ್ಲಿ ವಿಷಯ ಮತ್ತು ಶಿಕ್ಷಕರ ತರಬೇತಿ ಕೋರ್ಸುಗಳು ಸೇರಿವೆ. 2030 ರ ನಂತರ 4 ವರ್ಷಗಳ ಬಿ.ಎಡ್ ಕೋರ್ಸ್‍ನ್ನು ಶಿಕ್ಷಕರಿಗೆ ಕಡ್ಡಾಯ ಮಾಡಲಾಗುತ್ತದೆ. ಪದವಿ ಪಡೆದವರಿಗೆ ಎರಡು ವರ್ಷದ ಬಿ. ಎಡ್ ಕೋರ್ಸ್ ಲಭ್ಯವಿರುತ್ತದೆ.


    ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವೈದ್ಯಕೀಯ ಮತ್ತು ಕಾನೂನು ಶಿಕ್ಷಣಗಳನ್ನು ಹೊರತು ಪಡಿಸಿ, ಉಳಿದ ಎಲ್ಲಾ ಶಿಕ್ಷಣ ಪದ್ಧತಿಗಳಿಗೆ ಅನ್ವಯವಾಗುತ್ತದೆ. ನೀತಿಯನ್ನು ಯಶಸ್ವಿಯಾಗಿ ಜಾರಿಗೊಳಿಸಲು , ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ರಾಜ್ಯ ಶಿಕ್ಷಣ ಮಂಡಳಿಗಳು, ನಿಯಂತ್ರಣ ಸಂಸ್ಥೆಗಳು, ಭೋದಕರು, ಹೀಗೆ ಹಲವಾರು ಸಂಸ್ಥೆಗಳು ಎಲ್ಲರೂ ಸಹ ಒಟ್ಟಿಗೆ ಕೈಗೂಡಿಸಿ ಆಸಕ್ತಿಯಿಂದ ಕಾರ್ಯ ನಿರ್ವಹಿಸ ಬೇಕಾಗಿದೆ. ಮುಂದಿನ ದಶಕಗಳಲ್ಲಿ ಭಾರತೀಯ ಶಿಕ್ಷಣವು ಯುವ ಪೀಳಿಗೆಗೆ ಅನುಕೂಲವಾಗಲೆಂಬ ಆಶಯ. ಭಾರತ ಸರ್ಕಾರವೇ ದಾಖಲಿಸಿರುವಂತೆ 2030 – 40 ರ ದಶಕದ ವೇಳೆಗೆ ಹೊಸ ಶಿಕ್ಷಣ ನೀತಿಯು ಸಂಪೂರ್ಣವಾಗಿ ಕಾರ್ಯ ರೂಪಕ್ಕೆ ಬರುವ ಇಚ್ಚೆಯನ್ನು ಹೊಂದಲಾಗಿದೆ. ಕಾರ್ಯ ರೂಪಕ್ಕೆ ತರುವಾಗ ನಮ್ಮ ಎದುರು ನಿಲ್ಲುವ ಸವಾಲುಗಳಿಗೆ ಉತ್ತರ ಕಂಡುಕೊಂಡು ಮುನ್ನಡೆಯ ಬೇಕಾಗಿದೆ.

    Photo by olia danilevich from Pexels

    ಡಾ. ಬಿ. ಎಸ್ . ಶ್ರೀಕಂಠ
    ಡಾ. ಬಿ. ಎಸ್ . ಶ್ರೀಕಂಠ
    ನಾಡಿನ ಹೆಸರಾಂತ ಶಿಕ್ಷಣ ತಜ್ಞರಾದ ಡಾ. ಬಿ.ಎಸ್ .ಶ್ರೀಕಂಠ ಅವರು ಕಳೆದ ನಲುವತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸಧ್ಯ ಬೆಂಗಳೂರಿನ ಸಿಂಧಿ ಕಾಲೇಜಿನ ನಿರ್ದೇಶಕರಾಗಿ ನಿವೃತ್ತರಾಗಿರುವ ಬಿ. ಎಸ್ . ಶ್ರೀಕಂಠ ಅವರು ಈ ಹಿಂದೆ ಸುರಾನಾ, ಆರ್ ಬಿ ಎ ಎನ್ ಎಂ ಎಸ್ ಕಾಲೇಜಿನ ಪ್ರಿನ್ಸಿಪಾಲರು ಆಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತಗಾರ ಎಂಬ ಹೆಸರು ಪಡೆದಿರುವ ಅವರು ಪ್ರಾಧ್ಯಾಪಕರಾಗಿಯೂ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯ. ವಿಜ್ಞಾನಿ ಆಗಿಯೂ ಅವರು ಶೈಕ್ಷಣಿಕ ವಲಯದಲ್ಲಿ ಪರಿಚಿತ.
    spot_img

    More articles

    12 COMMENTS

    1. ಸಮಯೋಜಿತ ಲೇಖನ ಸರ್. ಈ ಹೊಸ ಶಿಕ್ಷಣ ನೀತಿಗೆ ಶಿಕ್ಷಕರ ತರಬೇತಿ ಹೇಗೆ?! ಬದಲಾದ ಶಿಕ್ಷಣ ನೀತಿಗೆ ಮೊದಲು ಶಿಕ್ಷಕರನ್ನು ತಯಾರು ಮಾಡುವುದು ಸರ್ಕಾರಕ್ಕೆ ಸವಾಲೆನೋ?

    2. ಲೇಖನ ಮತ್ತು ಲೇಖಕರಿಗೆ ಅಭಿನಂದನೆಗಳು… ಸುಂದರವಾಗಿ ಅರ್ಥಪೂರ್ಣವಾದ ಮಾಹಿತಿ. ‌‌‌

    3. ಸರಳವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದಿದ್ದೀರ ಸಾರ್.

    4. ಹೊಸ ಶಿಕ್ಷಣ ನೀತಿಯು ಜಾರಿಗೆ ಬರಲು ಎಷ್ಟು ವರ್ಷ ಬೇಕಾಗುತ್ತದೆ .ನಂತರ ಈಗ ಪಿ ಯು ತರಗತಿಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರ ಭವಿಷ್ಯ ಏನಾಗುತ್ತದೆ. ಪಿ ಯು ತರಗತಿಯ ಜೊತೆ ಶಾಲೆ ಇದ್ದಲ್ಲಿ ವಿಲೀನಗೊಳ್ಳುವುದಾದರೂ ಬರೀ ಪಿ ಯು ಕಾಲೇಜುಗಳ ಶಿಕ್ಷಕರು ಏನಾಗುತ್ತದೆ. ಈಗ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡ್ ಮಾಡಿದರೆ ಸಹಾಯ ವಾಗುತ್ತದೆಯೆ?.

    5. ನೂತನ ಶಿಕ್ಷಣ ನೀತಿ 2020 ರ ಬಗ್ಗೆ ಶಿಕ್ಷಣ ತಜ್ಞರಾಗಿರುವ ಡಾ. ಬಿ. ಎಸ್ ಶ್ರೀಕಂಠ ಸರ್ ರವರು ತುಂಬಾ ಚೆನ್ನಾಗಿ, ಸಂಕ್ಷಿಪ್ತವಾಗಿ, ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ವಿವರಿಸಿದ್ದೀರಿ. ಧನ್ಯವಾದಗಳು ಸರ್🙏
      ನಮ್ಮಿಂದ ಈ ತರಹ ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳನ್ನು ನಿರೀಕ್ಷಿಸುತ್ತೇವೆ ಸರ್.

    6. Very informative article.The 5+3+3+4 system is there in several countries.If a policy change is the need of the hour to overhaul our education system then let us hope for the better and the new policy is most welcome.But I feel that the stake holders need to be made to understand as to what was wrong with the present policy?

    LEAVE A REPLY

    Please enter your comment!
    Please enter your name here

    Latest article

    error: Content is protected !!