UVCE ಆಡಳಿತ ಮಂಡಳಿಗೆ ಸದಸ್ಯರ ನೇಮಕ; ಸಡಗೋಪನ್, ಬಿ.ವಿ.ಜಗದೀಶ್ ಗೆ ಸ್ಥಾನ

BENGALURU OCT 11

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ)ನ ಪ್ರಥಮ ಆಡಳಿತ ಮಂಡಳಿಗೆ ಸರಕಾರವು ಬೆಂಗಳೂರು ಐಐಐಟಿಯ ಸಂಸ್ಥಾಪಕ ಮತ್ತು ನಿವೃತ್ತ ನಿರ್ದೇಶಕ ಪ್ರೊ.ಎಸ್.ಸಡಗೋಪನ್ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಬಿ.ವಿ.ಜಗದೀಶ್ ಸೇರಿದಂತೆ ಹಲವರನ್ನು ಸದಸ್ಯರನ್ನಾಗಿ ನೇಮಿಸಿದೆ.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಇದಕ್ಕೆ ತಮ್ಮ ಅನುಮೋದನೆ ನೀಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ತಿಳಿಸಿದ್ದಾರೆ.

ಉಳಿದಂತೆ ನೆಕ್ಸ್ಟ್ ವೆಲ್ತ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಒ ಮೈಥಿಲಿ ರಮೇಶ್, ಭಾರತೀಯ ವಿಜ್ಞಾನ ಸಂಸ್ಥೆಯ ಮಿದುಳು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ವೈ. ನರಹರಿ, ಧಾರವಾಡದ ಐಐಟಿ ರಿಜಿಸ್ಟ್ರಾರ್ ಪ್ರೊ ಬಿ. ಬಸವರಾಜಪ್ಪ, ಜೆರೋಡಾ ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಏರ್ ವೈಸ್ ಮಾರ್ಷಲ್ ಬಿ.ನರೇಂದ್ರ ಕುಮಾರ್ ಅವರನ್ನು ಆಡಳಿತ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇವರೆಲ್ಲರ ಅಧಿಕಾರಾವಧಿ ಮೂರು ವರ್ಷಗಳಾಗಿವೆ. ಇವರೆಲ್ಲ ಯುವಿಸಿಇಯನ್ನು ಜಾಗತಿಕ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಲು ಸೂಕ್ತ ಯೋಜನೆಗಳನ್ನು ರೂಪಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here