ಯಶವಂತಪುರ ವೃತ್ತದ ಸಮೀಪ ನಾಲ್ಕು ಪಥದ ರೈಲ್ವೆ ಸೇತುವೆ; ನಿರ್ಮಲಾ ಕಾನ್ವೆಂಟ್ ಬಳಿಯೂ ಸೇತುವೆ

BENGALURU DEC 9

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಯಶವಂತಪುರ ವೃತ್ತದ ಸಮೀಪ ಇರುವ ರೈಲ್ವೆ ಸೇತುವೆಯನ್ನು 12 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ರಸ್ತೆ, ಮೂಲಸೌಕರ್ಯ, ಬೃಹತ್ ನೀರುಕಾಲುವೆ ಮತ್ತು ಕೆರೆಗಳ ವಿಭಾಗಗಳಿಂದ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಅವರು ಗುರುವಾರ ಈ ತೀರ್ಮಾನ ತಿಳಿಸಿದರು.

ಸಭೆಯ ಬಳಿಕ ಮಾತನಾಡಿದ ಅವರು, ಈ ಸೇತುವೆಯ ಮರುನಿರ್ಮಾಣವು ಜನವರಿಯಲ್ಲಿ ಆರಂಭವಾಗಿ 2022ರ ಅಕ್ಟೋಬರಿನಲ್ಲಿ ಮುಗಿಯಲಿದೆ. ಇದರ ಜತೆಗೆ ಮಲ್ಲೇಶ್ವರಂ ಬಡಾವಣೆಯಲ್ಲಿರುವ ನಿರ್ಮಲಾ ಕಾನ್ವೆಂಟ್ ಬಳಿಯಲ್ಲೂ ಒಂದು ರೈಲ್ವೆ ಸೇತುವೆ ನಿರ್ಮಿಸಲಾಗುವುದು ಎಂದು ಹೇಳಿದರು.

ಮಿಕ್ಕಂತೆ, ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಮಿಲ್ಕ್ ಕಾಲೋನಿ ಸಂಪರ್ಕಕ್ಕೆ ರೈಲ್ವೆ ಅಂಡರ್ ಪಾಸ್, ಮೈಸೂರು ಲ್ಯಾಂಪ್ ಕಾರ್ಖಾನೆ ಪಕ್ಕದಿಂದ ಬ್ರಿಗೇಡ್ ಅಪಾರ್ಟ್ ಮೆಂಟ್ ನಡುವೆ ಸುಗಮ ಸಂಚಾರಕ್ಕೆ ರೈಲ್ವೆ ಕೆಳಸೇತುವೆ ಮತ್ತು ಇಡೀ ಸಂಪಿಗೆ ರಸ್ತೆಯನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ನುಡಿದರು.

ಭಾರತೀಯ ವಿಜ್ಞಾನ ಮಂದಿರದ ಎದುರು ಮೇಖ್ರಿ ರಸ್ತೆಯ ಕಡೆಗೆ ಹೋಗುವ ರಸ್ತೆಯು ಈಗ ಕಿರಿದಾಗಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಈ ರಸ್ತೆ ಅಗಲೀಕರಣಕ್ಕೆ ವಿಜ್ಞಾನ ಮಂದಿರದ ಸ್ವಲ್ಪ ಭೂಮಿ ಬೇಕಾಗುತ್ತದೆ. ಈ ಸಂಬಂಧ ಆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲು ಮುಖ್ಯ ಕಾರ್ಯದರ್ಶಿಗಳಿಗೆ  ಜವಾಬ್ದಾರಿ ವಹಿಸಲಾಗಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಸಭೆಯಲ್ಲಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ದೀಪಕ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here