ಈ ವೀಕೆಂಡ್‌ಗೆ ಆನ್‌ಲೈನ್‌ನಲ್ಲಿ ʼಕಲಾನಿಧಿʼ ಸಂಗೀತ ಸುಧೆ ನಾಳೆಯಿಂದ 3 ದಿನ ಪ್ರಸಾರ


ಕೋವಿಡ್‌ ಸಂಕಷ್ಟಕ್ಕೆ ಸಿಲುಕಿರುವ ಸಂಗೀತ ಕಲಾವಿದರ ನೆರವಿಗಾಗಿ ರೂಪಿಸಲಾಗಿರುವ ʼಕಲಾನಿಧಿ- 2021ʼ ಸಂಗೀತ ಕಾರ್ಯಕ್ರಮ ನಾಳೆ ಶುಕ್ರವಾರದಿಂದ (ಜನ್ 25,26 ಮತ್ತು 27 )ಭಾನುವಾರದವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಎಲ್ಲರೂ ವೀಕ್ಷಿಸಿ ಉದಾರವಾಗಿ ದೇಣಿಗೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ, ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪಿತವಾಗಿದೆ. ಶುಕ್ರವಾರ ಮತ್ತು ಶನಿವಾರ ಸಂಜೆ 7ರಿಂದ 10 ಗಂಟೆವರೆಗೆ ಹಾಗೂ ಭಾನುವಾರ 4ರಿಂದ 10 ಗಂಟೆ ತನಕ ಕಾರ್ಯಕ್ರಮ ಪ್ರಸಾರ ಆಗಲಿದೆ ಎಂದರು.

ಯುಟ್ಯೂಬ್‌ ಸೇರಿ ನಮ್ಮ ಮೂವರ ಜಾಲತಾಣಗಳ (FB LIVE) ಖಾತೆಗಳಲ್ಲಿ ಕಲಾನಿಧಿ ಕಾರ್ಯಕ್ರಮ ಪ್ರಸಾರವಾಗಲಿದೆ. ಜಾಗತಿಕ ಮಟ್ಟದ ಪ್ರಸಿದ್ಧ ಗಳಿಸಿರುವ ಗಾಯಕರಾದ ವಿಜಯ ಪ್ರಕಾಶ್‌, ಸೋನು ನಿಗಮ್‌ ಸೇರಿದಂತೆ ನೂರಕ್ಕೂ ಹೆಚ್ಚು ಖ್ಯಾತ ಕಲಾವಿದರು, ಅನೇಕ ಉದಯೋನ್ಮುಖ ಸಂಗೀತಗಾರರು ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಪ್ರತಿಯೊಬ್ಬರೂ ವೀಕ್ಷಿಸಿ ಕಲಾವಿದರ ಕಷ್ಟಕ್ಕೆ ಮಿಡಿಯಬೇಕು. ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವಾಗಲೇ ತೆರೆಯ ಮೇಲೆ ಯಾವ ಖಾತೆಗೆ ಹಣ ವರ್ಗಾಯಿಸಬೇಕು ಎಂಬ ಮಾಹಿತಿಯೂ ಕಾಣಿಸಿಕೊಳ್ಳುತ್ತದೆ ಎಂದು ಡಿಸಿಎಂ ಕೋರಿದರು.

ಇದೊಂದು ಅಪರೂಪದ ಕಾರ್ಯಕ್ರಮ. ಸಂಕಷ್ಟದ ಒತ್ತಡ ಕಾಲದಲ್ಲಿ ಸಂಗೀತ ಔಷಧದಂತೆ ಕೆಲಸ ಮಾಡುತ್ತದೆ. ಸಂಗೀತ ಆಲಿಸುವುದರಿಂದ ನಮ್ಮ ಮಿದುಳಿನ ಎಲ್ಲ ಭಾಗಗಳು ಚುರುಕಾಗಿ ಕೆಲಸ ಮಾಡುತ್ತವೆ. ಇದು ವೈಜ್ಞಾನಿಕವಾಗಿ ಸಾಭೀತಾಗಿರುವ ಅಂಶ ಎಂದು ಡಿಸಿಎಂ ತಿಳಿಸಿದರು.

ಬ್ಯಾಂಕ್‌ ಖಾತೆಗೇ ಹಣ:ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕೈಗೆ ನಗದು ಕೊಡುವ ವ್ಯವಹಾರವೇ ಇರುವುದಿಲ್ಲ. ಹೀಗಾಗಿ ಕಲಾನಿಧಿ ಕಾರ್ಯಕ್ರಮದ ಎಲ್ಲ ಹಣಕಾಸು ವ್ಯವಹಾರವೂ ಸಂಪೂರ್ಣ ಪಾರದರ್ಶಕ. ಆದ್ದರಿಂದ ಎಲ್ಲರೂ ಇಂಥ ಮಹತ್ತರ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ನೋಡಿದ ನಂತರ ಆಸಕ್ತರು ದೇಣಿಗೆಯನ್ನು ಅನ್ ಲೈನ್ ಮೂಲಕ ಪಾವತಿ ಮಾಡಲು ಅವಕಾಶ ಇರುತ್ತದೆ. ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ನೆರವಾಗಲು ಇದೊಂದು ಅವಕಾಶ’ ಎಂದು ಹೇಳಿದರು

ಗಾಯಕ ವಿಜಯ್‌ ಪ್ರಕಾಶ್‌ ಕೂಡ ಮಾತನಾಡಿದರು.

LEAVE A REPLY

Please enter your comment!
Please enter your name here