ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಚಾಲಕ ನಿದ್ದೆ ಮಾಡಿದರೆ ಎಚ್ಚರಿಸುವ ತಂತ್ರಜ್ಞಾನ

ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎ.ಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದರೂ ನಮ್ಮ ಸರ್ಕಾರಿ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನಲಾಗಿದೆ.

ಇದರಲ್ಲಿ ಸಿಡಬ್ಲ್ಯುಎಸ್ ಮತ್ತು ಡಿಡಿಎಸ್ ಎಂಬ ಎರಡು ರೀತಿಯ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಸಿಡಬ್ಲ್ಯುಎಸ್ ಎಂದರೆ ಕೊಲಿಜಿಯನ್ ವಾರ್ನಿಂಗ್ ಸಿಸ್ಟಮ್. ಡಿಡಿಎಸ್ ಎಂದರೆ ಡ್ರೈವರ್ ಡ್ರೋಜಿನೆಸ್ ಡಿಟೆಕ್ಷನ್ ಸಿಸ್ಟಮ್ . ಇದರಿಂದ ಬಸ್ಸಿನ ಸಮೀಪಕ್ಕೆ ಮತ್ತೊಂದು ವಾಹನ ಬಂದರೆ ಅಥವಾ ಚಾಲಕ ನಿದ್ರಿಸಿ ಡಿವೈಡರ್ ಕಡೆ ಸಾಗುತ್ತಿದ್ದರೆ ಈ ಆರ್ಟಿಫಿಷಿಯಲ್ ತಂತ್ರಜ್ಞಾನ ಶಬ್ದ ಮಾಡಿ ಎಚ್ಚರಿಸುತ್ತದೆ. ಜೊತೆಗೆ ಕಂಟ್ರೋಲ್ ರೂಮ್ ಗೆ ಮಾಹಿತಿ ರವಾನೆ ಮಾಡುತ್ತದೆ. ಇದರಿಂದಾಗಿ ಚಾಲಕ ಸದಾ ಜಾಗರೂಕತೆಯಿಂದ ಇರುವಂತೆ ಮಾಡುವುದರ ಜೊತೆಗೆ ಅಪಘಾತ ಮತ್ತು ಅನಾಹುತಗಳನ್ನು ತಪ್ಪಿಸಬಹುದಾಗಿದೆ.

ನಮಗೆ ನಮ್ಮ ಜನರ ಜೀವ ಮುಖ್ಯ ಇದರಿಂದಾಗಿ ಅಪಘಾತ ರಹಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಟೆಕ್ನಾಲಜಿಯನ್ನು ಕರಾರಸಾ ನಿಗಮದ 1044 ಬಸ್ಸುಗಳಿಗೆ ಮೊದಲು ಅಳವಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಾಹನಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತನೆ ಮಾಡಿದೆ ಎಂದು ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here