ರಜನಿ ಅಧ್ಯಾತ್ಮ ರಾಜಕೀಯದಿಂದ ಯಾರಿಗೆ ಲಾಭ

ದಕ್ಷಿಣ ಭಾರತದ ನಾಲ್ಕು (ಆಥವಾ ಐದು) ಭಾಷೆಗಳನ್ನು ದ್ರಾವಿಡ ಭಾಷೆಗಳೆಂದೇ ಕರೆಯಲಾಗುತ್ತಿತ್ತು. ಆದರೆ ಸಂಸ್ಕೃತದ ಮೇಲ್ಮೆಯ ಹಿನ್ನೆಲೆಯಲ್ಲಿ ಅವುಗಳಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ. ಇದರ ಪರಿಣಾಮವಾಗಿ ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯ ಹುಟ್ಟಿಕೊಂಡಿತ್ತು. 1891ರಲ್ಲೇ ದ್ರಾವಿಡ ರಾಜಕೀಯ ನಾಯಕತ್ವ ವಹಿಸಿದ್ದ  ಜ್ಯೋತಿ ಥಾಸ್ ಎಂಬವರು ದ್ರಾವಿಡ ಮಹಾಜನ ಸಭಾವನ್ನು ಆಯೋಜಿಸಿದ್ದರು. ಬಳಿಕ ಪೆರಿಯಾರ್ ಅವರಿಂದ ದ್ರಾವಿಡ ಮುನ್ನೇತ್ರ ಕಝಗಂ (ದ್ರಾವಿಡ ಪ್ರಗತಿಪರ ಸಂಘ-ಡಿಎಂಕೆ) ಎಂಬ ಪಕ್ಷ ಸ್ಥಾಪನೆಯಾಗಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಧಿಕಾರಕ್ಕೂ ಬಂತು. ಬಳಿಕ ಕಾಲಾನಂತರದಲ್ಲಿ ಅದು ಒಡೆದು ಅಣ್ಣಾಡಿಎಂಕೆ (ಎಐಎಡಿಎಂಕೆ) ಎಂಬ ಪಕ್ಷ ಸ್ಥಾಪನೆಯಾಯಿತು. ಅದು ಕೂಡ ಅಧಿಕಾರಕ್ಕೆ ಬಂತು.

ಏನಿದು ಅಧ್ಯಾತ್ಮ ರಾಜಕೀಯ ?

ಬಹುತೇಕ ನಾಸ್ತಿಕವಾದವನ್ನೇ ಪ್ರತಿಪಾದಿಸುತ್ತಿದ್ದ ಡಿಎಂಕೆಯ ನೇತಾರ ಈಗಿಲ್ಲ. ಕರ್ನಾಟಕದಲ್ಲೇ ಹುಟ್ಟಿದ್ದರೂ ಅದೇ ಕಾರಣಕ್ಕಾಗಿಯೇ ಕಾವೇರಿ ನೀರು ಹಂಚಿಕೆಯನ್ನು ಪದೇ ಪದೇ ಕೆದಕುತ್ತಿದ್ದ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾ ಈಗ ಇತಿಹಾಸದ ಪುಟ ಸೇರಿದ್ದಾರೆ.

ಇಂತಹ ನಿರ್ವಾತ ವಾತಾವರಣದಲ್ಲಿ ಮೂಲತಃ ಮರಾಠಿಗನಾಗಿದ್ದರೂ ಕರ್ನಾಟಕದಲ್ಲೇ ಬೆಳೆದು, ತಮಿಳುನಾಡಿನಲ್ಲಿ ಬಾಳಿ ಬೆಳಗಿದ ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ದಾಳ ಉರುಳಿಸಿದ್ದಾರೆ. ತಾವು ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತದ ಜತೆಗೆ ಅಧ್ಯಾತ್ಮದ ರಾಜಕೀಯವನ್ನೂ ನೀಡುವುದಾಗಿ ಘೋಷಿಸಿದ್ದಾರೆ. ಹೊಸ ವರ್ಷದ ದಿನ ತಮ್ಮ ಪಕ್ಷದ ಹೆಸರನ್ನೂ ಪ್ರಕಟಿಸಲಿದ್ದಾರೆ.

ತಮಿಳುನಾಡಿನಲ್ಲಿ 2021ರಲ್ಲಿ ನಡೆಯಲಿದೆ. ಡಿಎಂಕೆ ನಾಯಕ ಕರುಣಾನಿಧಿ, ಅಣ್ಣಾಡಿಎಂಕೆ ನಾಯಕಿ ಜಯಲಲಿತಾ ಇಲ್ಲದೆ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದು. ಇತಿಹಾಸವನ್ನು ಕೆದಕಿ ನೋಡಿದರೆ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಬದಲಾಗಿ ಬೆಳ್ಳಿ ತೆರೆಯ ನಾಯಕರ ವರ್ಚಸ್ಸೇ ಪ್ರಾಬಲ್ಯ ಇರುವುದು ಕಂಡು ಬರುತ್ತದೆ. ಆದರೆ ಈ ಬಾರಿ ಇಡೀ ರಾಜ್ಯ ರಾಜಕೀಯದ ಇತಿಹಾಸಕ್ಕೆ ಹೊಸ ಭಾಷ್ಯ ಬರೆಯಲು ರಜನೀಕಾಂತ್ ಹೊರಟಂತಿದೆ. ಅದುವೇ ಅಧ್ಯಾತ್ಮ ರಾಜಕೀಯದ ಮಾತು.

ಬದಲಾದ ಕಾಲಮಾನ

ಹೇಳಿ ಕೇಳಿ ರಜನೀಕಾಂತ್ ತಮ್ಮ ಅಧ್ಯಾತ್ಮ ಜೀವನದಿಂದ ಹೆಚ್ಚು ಪರಿಚಿತರು. ಸಿನಿಮಾದ ಜತೆಗೆ ಬಾಬಾ ಎನ್ನುವಂತಹ ಸಿನಿಮಾ ಮಾಡುವುದು, ಆಗಾಗ ಹಿಮಾಲಯದ ಗೌಪ್ಯ ಪ್ರದೇಶಕ್ಕೆ ಸಂಚಾರ ಮಾಡಿ ದಿನಗಟ್ಟಲೆ ಅಲ್ಲಿರುವುದು, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ದರ್ಶನ ಇತ್ಯಾದಿಗಳು ಕೆಲವೇ ಕೆಲವು ಉದಾಹರಣೆಗಳು ಮಾತ್ರ. ಆದರೆ ಅಧ್ಯಾತ್ಮದ ಜತೆ ಅವರ ನಂಟು ಇದ್ದೇ ಇದೆ.

ಕಳೆದ 25 ವರ್ಷಗಳಿಂದಲೂ ರಾಜಕೀಯ ಪ್ರವೇಶ ಮಾಡುವ ಕುರಿತು ಇದ್ದ ವದಂತಿಗಳಿಗೆ ತೆರೆ ಎಳೆದಿರುವ ಸೂಪರ್ ಸ್ಟಾರ್ ರಜನಿ, ಈಗ ಮನಬಿಚ್ಚಿ ಮಾತನಾಡಿದ್ದಾರೆ. ಒಳ್ಳೆಯದನ್ನೇ ಮಾಡಿ, ಒಳ್ಳೆಯದ್ದನ್ನೇ ಮಾತನಾಡಿ, ಇದರಿಂದ ಒಳ್ಳೆಯದಾಗುತ್ತದೆ ಎಂಬ ಅವರ ಮಾರ್ಮಿಕ ಮಾತುಗಳೇ ಮುಂದಿನ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿದೆ.

ಬಿಜೆಪಿ ಸಖ್ಯ

ಈಗ ಪ್ರಶ್ನೆ ಇರುವುದೇ ಇಲ್ಲಿ. ರಜನೀಕಾಂತ್ ಎಷ್ಟು ಸ್ಥಾನ ಗೆಲ್ಲಬಹುದು ? ಪೂರ್ಣ ಬಹುಮತವಂತಲೂ ಕಷ್ಟ ಸಾಧ್ಯ. ಹೀಗಾಗಿ ಅವರು ಯಾರ ಜತೆ ಸಖ್ಯ ಬೆಳೆಸಿಕೊಳ್ಳಬಹುದು ಎಂಬುದು. ಅಧ್ಯಾತ್ಮ ರಾಜಕಾರಣದ ಬಗ್ಗೆ ಮಾತನಾಡಿದ ಬಳಿಕ ಡಿಎಂಕೆ ಜತೆಗಂತೂ ಅವರು ಹೋಗುವ ಸಾಧ್ಯತೆಯೇ ಇಲ್ಲ. ಅಣ್ಣಾ ಡಿಎಂಕೆ ಅಷ್ಟು ನಿಷ್ಠುರ ನಾಸ್ತಿಕ ಪಕ್ಷವಲ್ಲ. ಹೀಗಾಗಿ ಅದರ ಜತೆಗೆ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಇದರ ನಡುವೆ ಭಾರತೀಯ ಜನತಾ ಪಕ್ಷ ಈಗಾಗಲೇ ಹೈದರಾಬಾದ್ ಕಾರ್ಪೋರೇಶನ್ ನಲ್ಲಿ ಸಾಕಷ್ಟು ಸಂಖ್ಯೆ ಗಳಿಸಿ ಮುನ್ನಲೆಗೆ ಬಂದಿದೆ. ಹೀಗಾಗಿ ಕರ್ನಾಟಕ ಬಿಟ್ಟರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮಾನ್ಯತೆಯಿಲ್ಲ ಎಂಬ ಹೀಗಳಿಕೆಯನ್ನು ತೆಗೆದು ಹಾಕಿದೆ. ಈ ಹಿಂದೆ ಕೇರಳ ವಿಧಾನಸಭೆ ಚುನಾವಣೆಯಲ್ಲೂ ಗಣನೀಯ ಪ್ರಮಾಣದಲ್ಲಿ ಮತ ಗಳಿಸಲು ಅದಕ್ಕೆ ಸಾಧ್ಯವಾಗಿತ್ತು. 6-10 ಅಭ್ಯರ್ಥಿಗಳು ಒಂದು ಸಾವಿರ ಮತಗಳ ಅಂತರದಿಂದಷ್ಟೇ ಸೋತಿದ್ದರು.

ಈಗ ತಮಿಳುನಾಡು ವಿಧಾನಸಭೆ ಚುನಾವಣೆ. ಈಗಾಗಲೇ ಅಮಿತ್ ಶಾ ಅವರು ರಜನೀಕಾಂತ್ ಅವರನ್ನು ಭೇಟಿಯಾಗಿದ್ದಾರೆ. ಡಿಎಂಕೆ ಮತಗಳು ಒಡೆದು ಒಂದೆಡೆ ರಜನಿ ಪಕ್ಷಕ್ಕೆ, ಇನ್ನೊಂದೆಡೆ ಬಿಜೆಪಿಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ. ಇದರ ಪರೋಕ್ಷ ಲಾಭವನ್ನು ಅಣ್ಣಾ ಡಿಎಂಕೆ ಪಡೆದರೂ ಆಗ ಮತ್ತೆ ರಜನಿಯದ್ದೇ ಮೇಲುಗೈ ಆಗುತ್ತದೆ.

ಈ ಅಂಕಣದೊಂದಿಗೆ ಪ್ರಕಟವಾದ ಕ್ಯಾರಿಕೇಚರ್ ಬರೆದವರು ಸಂತೋಷ ಸಸಿಹಿತ್ಲು.ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಸಾಕಷ್ಟು ಚಿತ್ರಗಳು ಪ್ರಕಟವಾಗಿವೆ. ಕಾರ್ಟೂನ್, ಇಲಸ್ಟ್ರೇಷನ್, ಭಾವಚಿತ್ರಗಳನ್ನು ರಚಿಸುವಲ್ಲಿ ಅವರು ಸಿದ್ಧ ಹಸ್ತರು. ಅವರ ಸಂಪರ್ಕ ಸಂಖ್ಯೆ 9986688101

1 COMMENT

  1. ಉತ್ತಮ ವಿಶ್ಲೇಷಣೆ.. ಸಂತೋಷ್ ಅವರು ಬರೆದ ಚಿತ್ರ ಸೊಗಸಾಗಿದೆ. ಮುಂದಿನ ಚುನಾವಣೆಯಲ್ಲಿ ಏನಾಗುವುದೋ ಕಾದು ನೋಡಬೇಕು

LEAVE A REPLY

Please enter your comment!
Please enter your name here