ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ತಿದ್ದುತ್ತಿದ್ದರು, ತಿಳಿಸುತ್ತಿದ್ದರು

5
333
ಕಲೆ: ಕಿರಣ್ ಮಾಡಾಳು

ವಟ ವಟ ವಟಾ ಅಂತ ಒಳ್ಳೇ ಹೊಸ ನೀರ್ ಕಪ್ಪೆಗಳ ಥರ ವಟಗುಡ್ತಾಇರ್ತೀರ . ಕಿಟಕೀ ನಲ್ಲೇನ್ ಕೋತಿ ಕುಣೀತಿದೀಯಾ ? ಬರ್ತಾ ಬರ್ತಾ ರಾಯರ್ ಕುದುರೆ ಕತ್ತೆ ಆಯ್ತು . ಹೋಂ ವರ್ಕ್ ಮಾಡದೇ ಮನೇಲ್ ಏನ್ ದನ ಕಾಯ್ತಿರ್ತೀರಾ ? ಬೆಲ್ ಹೊಡೆದಿದ್ದೇ ಕುರಿಗಳ ಥರ ನುಗ್ತೀರಲ್ಲೋ . ರಜೆ ಬಂತೂ ಅಂದ್ರೆ ಸಾಕು ಬೀದಿ ನಾಯಿ ಸುತ್ತಾಡದಂಗ್ ಸುತ್ತಾಡ್ತಾ ಇರ್ತೀರಾ . ಎಷ್ಟು ಹೊಡೆದ್ರೂ ಅಷ್ಟೇ ಬಡೆದ್ರೂ ಅಷ್ಟೇ ಎಮ್ಮೆ ಚರ್ಮ ನಿಮ್ದು . ಒಳ್ಳೇ ಕರ್ಡೀಗಳ ಥರ ಅಗಿದೀರ ನಾಳೆ ಕಟಿಂಗ್ ಮಾಡಿಸ್ಕೊಂಡ್ ಬಂದ್ರೆ ಸರಿ..

ಹೀಗೆ ಸದಾ ಒಂದಿಲ್ಲೊಂದು ಪ್ರಾಣೀನ ಹೋಲಿಸ್ಕೊಂಡು ನಮ್ ಟೀಚರ್ಗಳು ನಮ್ಮನ್ನ ಪಳಗಿಸಿರಲಿಲ್ಲ ಅಂದಿದಿದ್ರೆ ನಾವು ಇಂದು ಮನುಷ್ಯರಾಗಿ ಇರ್ತಿರ್ಲಿಲ್ಲ .

ಇವತ್ತು ನಾವು ಏನಾಗಿದೀವೋ ಅದಕ್ಕೆ ಕಾರಣ ನಮ್ಮ ಶಿಕ್ಷಕರು . ಪ್ರಾಥಮಿಕ ಪ್ರೌಢಶಾಲೆಯಿಂದಿಡಿದು ಪದವಿಪೂರ್ವ ದವರೆಗೂ ತುಂಬಾನೇ ಮುತುವರ್ಜಿ ತೋರುತ್ತಿದ್ದರು …..ಓದು ಬರವಣಿಗೆ.. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು , ತಿದ್ದುತ್ತಿದ್ದರು , ತಿಳಿಸುತ್ತಿದ್ದರು , ಓದಿಸುತ್ತಿದ್ದರು , ಬೋಧಿಸುತ್ತಿದ್ದರು . 

ಚೆನ್ನಾಗಿ ಓದಿ ತಂದೆ ತಾಯಿಗೆ ಒಳ್ಳೇ ಹೆಸರು ತಗೊಂಡುಬನ್ನಿ ಅಂತ ನಿಸ್ವಾರ್ಥವಾಗಿ ಕೇಳ್ಕೋತಿದ್ರು . ಓದಿನಲ್ಲೋ ಕ್ರೀಡೆಯಲ್ಲೋ ಫಸ್ಟ್ ಬಂದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು . 
ಹೌದಲ್ವಾ ….. ಅಪ್ಪ ಅಮ್ಮ ಹೊಟ್ಟೆಗೆ ಊಟ ತುಂಬ್ತಾರೆ ಆದರೆ ಶಿಕ್ಷಕರು ‌ನಮ್ಮಲ್ಲಿ ಸಮಾನತೆ ಸೃಜನಶೀಲತೆ ಸಾಕ್ಷರತೆ ವಿನಯತೆ ವಿಧೇಯತೆ ಔದಾರ್ಯತೆ ಸೌಹಾರ್ದತೆ ಸ್ಪರ್ಧಾತ್ಮಕತೆ ಎಲ್ಲಕ್ಕಿಂತಾ ಹೆಚ್ಚಾಗಿ ಮಾನವೀಯತೇನ ತುಂಬಿ, ಯೋಗ್ಯರನ್ನಾಗಿ ತಯಾರು ಮಾಡಿ ಸಮಾಜದಲ್ಲಿ ಬದುಕಲು ಬಿಡುತ್ತಾರೆ . 

ಸ್ಕೂಲಲ್ಲಿ ಟೀಚರ್ಗಳಾಗಿ , ಕಾಲೇಜುಗಳಲ್ಲಿ ಲೆಕ್ಚರರ್ಗಳಾಗಿ , ಕ್ರೀಡೆಯಲ್ಲಿ ಕೋಚ್ ಗಳಾಗಿ , ಸಂಗೀತದಲ್ಲಿ ಗುರುಗಳಾಗಿ , ಕೆಲಸದಲ್ಲಿ ಮಾರ್ಗದರ್ಶಕರಾಗಿ ಸದಾ ನಮ್ಮೊಂದಿಗೆ ಇರ್ತಾರೆ . ಮೂವತ್ತಾರು ಮೂವತ್ತೆಂಟು ವರ್ಷ ನಿಸ್ವಾರ್ಥ ಸೇವೆ ಮಾಡಿ ರಿಟೈರ್ಡ್ ಆಗಿರ್ತಾರೆ.

ಒಂದು ಊರಲ್ಲೋ ಯಾವುದೋ ಕಾರ್ಯಕ್ರಮದಲ್ಲೋ ಸಿಕ್ಕಾಗ ನಾವು ನಮಸ್ಕಾರ ಮಾಡಿ ಪ್ರೀತಿಯಿಂದ ಮಾತಾಡಿಸಿದಾಗ ಅವರು ಕೇಳೋದು ಎರಡೇ ಪ್ರೆಶ್ನೆ ಒಂದು ಏನ್ ಮಾಡ್ಕೊಂಡಿದೀಯಪ್ಪಾ ? ಇನ್ನೊಂದು ತಂದೆ ತಾಯೀನ ಚೆನ್ನಾಗಿ ನೋಡ್ಕೊಪ್ಪ ಅಂತ . 

ನಾವು ಗಳಿಸುವ ಆಸ್ತಿ ಶಾಶ್ವತವಲ್ಲ ಆದರೆ ಅವರು ಕಲಿಸುವ ಜ್ಞಾನ ಶಾಶ್ವತ . ಗುರು ಇಲ್ಲದೇ ಬದುಕಿನ ಗುರಿ ಇಲ್ಲ . ಮೊನ್ನೆ ಜರುಗಿದ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಮ್ಮೆಲ್ಲರ ಗುರುಗಳಿಗೆ.

ಕಿರಣ್ ಮಾಡಾಳು

ಈ ಅಂಕಣದೊಂದಿಗೆ ಪ್ರಕಟವಾಗಿರುವ animated illustration ರಚಿಸಿದವರು ಕಿರಣ್ ಮಾಡಾಳು. ಸಾಂಪ್ರದಾಯಿಕ ಚಿತ್ರಕಲೆಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ ನೀಡಿ ಅದು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಬಲ್ಲ ನಾಡಿನ ಕೆಲವೇ ಕಲಾವಿದರಲ್ಲಿ ಇವರೂ ಕೂಡ ಒಬ್ಬರು. ಅರಸೀಕರೆ ತಾಲೂಕು ಮಾಡಾಳು ಗ್ರಾಮದ ಕಿರಣ್ ಫೈನ್ ಆರ್ಟ್ಸ್ ಓದಿದ್ದಾರೆ. 3D ಚಿತ್ರ ರಚನೆಯಲ್ಲಿ ವಿಶೇಷ ಪ್ರಾವೀಣ್ಯ. ಆಧ್ಯಾತ್ಮಸಂಗತಿಗಳ ಬಗ್ಗೆ ವಿಶೇಷ ಪಾಂಡಿತ್ಯ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದ ಅನುಭವ. ಪ್ರವಾಸ ಮತ್ತು ಅಧ್ಯಯನದಲ್ಲಿ ಆಸಕ್ತಿ.ಅವರ ಸಂಪರ್ಕ ಸಂಖ್ಯೆ 9964655156

5 COMMENTS

  1. ಕೊನೆಯ ಸಾಲುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ
    ಉತ್ತಮ ಲೇಖನ

  2. ಶಿಷ್ಯನಿಗೆ ಗುರು ಬೇಕು, ಗುರು ಇದ್ದು ಗುರಿ ಇಲ್ಲದಿರೆ ಕಾರ್ಯಸಾಧನೆ ಕಷ್ಟಸಾಧ್ಯ. ಮಾರ್ಗ ತೋರಿಸುವ ಗುರು ಇದ್ದು, ಸರಿಯಾದ ಗುರಿ ಇದ್ದು, ಸಾಧಿಸುವ ಛಲ ಇದ್ದಲ್ಲಿ, ಶಿಷ್ಯನ ಕಾರ್ಯಸಾಧನೆ ಶತಸಿದ್ಧ. ಅತ್ತ್ಯುತ್ತಮ ಲೇಖನ.

  3. ಗುರು ಇಲ್ಲದೆ ಕಲಿತ ವಿದ್ಯೆ ಗೆ ಬೆಲೆಯಿಲ್ಲವಂತೆ. ನಾನು ಕೂಡ ಮಕ್ಕಳಿಗೆ ದನ ಕಾಯೋರೇ ಅಂತಾ ಅನ್ನುವಂತೆ. ಅದಕೆ ಕಾರಣ ದನ ಕಾಯೋನೇ ಅಂದರೆ ಕೃಷ್ಣ ಅಂತ ಅನ್ನುವ ಅರ್ಥ ಬರುತ್ತದೆ. ಲೇಖನ ಸೂಪರ್

LEAVE A REPLY

Please enter your comment!
Please enter your name here